ಕಳೆದ ಒಂದು ವರ್ಷದಿಂದ ಸಿದ್ಧವಾಗುತ್ತಿದ್ದ, ಈಗ ಕೊನೆಯ ಹಂತವನ್ನು ತಲುಪಿರುವ ಚಿತ್ರ, ಶಿಕಾರಿ. ಕಥೆ, ಚಿತ್ರ ಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಮಾಡುತ್ತಿರುವವರು ಕನ್ನಡದಲ್ಲಿ `ಗುಬ್ಬಚ್ಚಿಗಳು’ ಎಂಬ ಮಕ್ಕಳ ಚಿತ್ರವನ್ನು ಮಾಡಿದ ಎಫ್.ಟಿ.ಐ.ಐ ಪದವೀಧರ ಅಭಯ ಸಿಂಹ. ಕೆ. ಮಂಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ, ಶಿಕಾರಿ ಚಿತ್ರಕ್ಕೆ, ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ, ಮದನ್-ಹರಿಣಿ ನೃತ್ಯ ಸಂಯೋಜನೆ, ಅನಲ್ ಅರಸು ಸಾಹಸ ಸಂಯೋಜನೆ, ಎಸ್. ಮನೋಹರ್ ಸಂಕಲನ ಹಾಗೂ ವಿಕ್ರಂ ಶ್ರೀವಾಸ್ತವ ಛಾಯಾಗ್ರಹಣ ಇದೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಗೀತ ಸಾಹಿತ್ಯವನ್ನು ರಚಿಸಿದ್ದಾರೆ. ಶಿಕಾರಿ ಚಿತ್ರದಲ್ಲಿ ಮಮ್ಮುಟ್ಟಿ, ಪೂನಂ ಬಾಜ್ವಾ, ಇನ್ನೊಸೆಂಟ್, ಸಿಹಿ ಕಹಿ ಚಂದ್ರು, ಅಚ್ಚುತ, ನೀನಾಸಂ ಅಶ್ವತ್, ಟಿನಿ ಟಾಂ, ಸುರೇಶ್ ಕೃಷ್ಣ, ನೀನಾಸಂ ಸತೀಶ, ಶರತ್ ಲೋಹಿತಾಶ್ವ, ನವೀನ್ ಡಿ. ಪಡೀಲ್, ಚಂದ್ರಹಾಸ ಉಳ್ಳಾಲ್, ಅಕ್ಕಿ ಚನ್ನಬಸ್ಸಪ್ಪ ಮುಂತಾದವರು ನಟಿಸಿದ್ದಾರೆ. ಈ ಚಿತ್ರವು ಕನ್ನಡ ಹಾಗೂ ಮಲಯಾಳ ಭಾಷೆಗಳಲ್ಲಿ ಏಕ ಕಾಲದಲ್ಲಿ ಚಿತ್ರೀಕರಣಗೊಂಡಿದ್ದು ಜೊತೆಯಲ್ಲೇ ಬಿಡುಗಡೆಯಾಗಲಿವೆ. ಶಿಕಾರಿ ಚಿತ್ರದ ಮೂಲಕ ಮಲಯಾಳದ ದೈತ್ಯ ಪ್ರತಿಭೆ, ಮಮ್ಮುಟ್ಟಿಯವರು ಕನ್ನಡವನ್ನೂ ಪ್ರವೇಶಿಸುತ್ತಿದ್ದಾರೆ. ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ, ಐದು ಭಾಷೆಗಳಲ್ಲಿ ಅಭಿನಯಿಸಿ ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಈ ಮೇರು ನಟ ಶಿಕಾರಿ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿರುವುದು ಈ ಚಿತ್ರದ ಹಿರಿಮೆ. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಕನ್ನಡಕ್ಕೆ ಬಂದು ಅಭಿನಯಿಸಿದ ಬೇರೆ ಭಾಷೆಯ ಮೊದಲನೇ ನಾಯಕ ನಟನೂ ಇವರು. ಶಿಕಾರಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಂಜು ಸುರೇಂದ್ರನ್ ನಡೆಸಿದ ಸಂದರ್ಶನದ ಆಯ್ದ ಭಾಗಗಳು.